12 March, 2009

ಕಾಮ, ಪ್ರೇಮದ ಕೊಟ್ಟಕೊನೆಯ ಪ್ರಪಾತದ ಅಂಚಿನಿಂದ ಕೆಳಗೆ ಬೀಳುತ್ತಿರುವಾಗ...

ನನ್ನ ಮಿತ್ರ ಭಾರತೀಶ ನಿಮಗಾಗಿ ಕಳಿಸಿದ್ದು...
ಶತಮಾನದ ಕಾದಂಬರಿಯ ವಿಷಯ. ಆಗ ಕಾಮದ ವಾಸನೆ ಇರುವ ಸಾಹಿತ್ಯ ಆ ಸ್ಥಾನವನ್ನು ಅಲಂಕರಿಸಿದರೆ ಒಪ್ಪುವುದು ಹೇಗೆ !?
ಅದೊಂದು ಲೋಲುಪ, ಹೀನ, ಅಸಹ್ಯ ವಿಷಯಾಸಕ್ತಿ ಎಂದು ಎಲ್ಲರೂ ದೂರ ತಳ್ಳುತ್ತಾರೆ.
ಆ ವಿಷಯದಲ್ಲಿ ನನಗೊಂದು ಅನಿಸುತ್ತದೆ. ಸದಾ ನಮ್ಮನ್ನು ಪ್ರೇಮಿಸುವವರು ಬೇಕು ಎಂಬ ಅದಮ್ಯ ಬಾಯಾರಿಕೆ ಇರುತ್ತದೆ. ಅದು ಏನೋ ಒಂದು ರೀತಿಯ ಆಪ್ತತೆ, ಸುಖ ಕೊಡುತ್ತದೆ. ಯಾಂತ್ರಿಕ ಬದುಕಿಗೆ ವಿದಾಯ ಹೇಳುಬಹುದು ಎಂಬ ಅನಿಸಿಕೆ ಇದೆ. ಅದು ಸಾಧ್ಯ. ಯಾವಾಗ?
ಉದಾಹರಣೆಗೆ, ಹೆಂಡತಿ ಗಂಡನನ್ನು ಪ್ರೀತಿಸುತ್ತಾಳೆ. ಅವನೊಬ್ಬ ನನ್ನ ಸಂಗಾತಿ, ನನ್ನಂತೆಯೇ ಅದಾವನಿಂದಲೋ ಸೃಷ್ಟಿಸಲ್ಪಟ್ಟವ, ಅವನೂ ನನ್ನಂತೆಯೇ ಅದಾವುದಕ್ಕೋ ಹಂಬಲಿಸುತ್ತಿರುವವ, ಅವನಿಗೆ ಉಳಿದವುಗಳೊಂದಿಗೆ ಗುರಿಯಿಂದ ಭಿನ್ನವಾದ ಸಂಬಂಧ ಇಲ್ಲ, ಅವನು ತನ್ನನ್ನು ಅದಾವುದೋ ಶಕ್ತಿಯ ಭಾಗವೆಂದು ಎಷ್ಟು ಪ್ರೀತಿಸುತ್ತಾನೋ, ಆದರಿಸುತ್ತಾನೋ ಅಷ್ಟೇ ನನ್ನನ್ನೂ, ನನ್ನ ತನವನ್ನೂ ಪ್ರೇಮಿಸುತ್ತಾನೆ.. ಅಷ್ಟೆಲ್ಲಾ ಕಾರಣಗಳಿಂದಾಗಿ ಅವಳು ಅವನನ್ನು ಆದ್ಯಂತವಾಗಿ ಪ್ರೀತಿಸುತ್ತಾಳೆ. ಕೊನೆಯವರೆಗೂ ದೂರಾಗದೇ ಇರುವ ಸಂಗಾತಿಯೆಂದು ಹತ್ತಿರದ ಬಂಧವನ್ನು ಭಾವಿಸುತ್ತಾಳೆ. ಅಲ್ಲಿ ಪ್ರೀತಿ ತನ್ನ ಅರ್ಥವನ್ನು ಬಿಟ್ಟುಕೊಡುತ್ತದೆ. ಪ್ರೀತಿಯ ಅರ್ಥವನ್ನು ಹೀಗೆ ಎಂದು ಹೇಳಲು ಸಾಧ್ಯವಿಲ್ಲದ್ದರಿಂದ ಇದೇ ರೀತಿಯ ಯಾವುದಾದರೂ ಕ್ರಮದಲ್ಲಿ ಅರ್ಥಮಾಡಿಕೊಳ್ಳಲು ಪ್ರಯತ್ನಿಸುವುದು ಅನಿವಾರ್ಯ.
ಹಾಗೆ ಗಂಡ-ಹೆಂಡತಿಯರು ಇರಲಾಗದ ಪರಸ್ಥಿತಿಯನ್ನೂ ಕಲ್ಪಿಸಿಕೊಳ್ಳಿ. ಅವರ ಸಂಬಂಧ ಒಂದಷ್ಟು ಮೆಟೀರಿಯಲ್ ಸ್ಟಾಂಡರ್ಡ್್ಗಳ ಮೇಲೆ ನಿಂತಿರುತ್ತದೆ. ಅಂದರೆ, ಸಮಾಜದ ಹೆದರಿಕೆಯಿಂದ ಆ ಸಂಬಂಧವನ್ನು ಹಾಗೇ ಉಳಿಸಿಕೊಳ್ಳುತ್ತಾರೆ, ಮಕ್ಕಳ ಮೇಲಿನ ಮಮಕಾರದಿಂದ ಸಂಬಂಧವನ್ನು ಕಡಿದುಕೊಳ್ಳುವುದಿಲ್ಲ (ಇಬ್ಬರ ರಕ್ತವನ್ನೂ ಹಂಚಿಕೊಂಡು ಹುಟ್ಟಿರುವ ಮಕ್ಕಳಿಂದ ಗಂಡ-ಹೆಂಡತಿಯರ ಪಾಲನ್ನು ಇಷ್ಟಿಷ್ಟು ಎಂದು ಬೇರ್ಪಡಿಸಲಾಗದ್ದಕ್ಕಾಗಿ), ಇಷ್ಟರಮಟ್ಟಿಗಿನ ಸಂಗಾತಿಯೂ ಸಿಗದಿರುವ ಆತಂಕ, ಭಯದ ಕಾರಣದಿಂದಾಗಿ ಎಷ್ಟೋ ಸಂಬಂಧಗಳು ನಡುಗುತ್ತಾ ನಿಂತಿರುತ್ತವೆ.
ಆ ಹಂತದಲ್ಲಿ ತೀವ್ರ ಆಪ್ತ ಭಾವವನ್ನು ಸೃಜಿಸುವುದು ಈ ಕಾಮವೇ (ಕೆಲ ಕ್ಷಣಗಳ ಮಟ್ಟಿಗೆ) ಎಂದು ಅನಿಸುತ್ತದೆ. ಅದಕ್ಕೆ ಸರಿಯಾಗಿ ದೈಹಿಕ ಪ್ರಚೋದನೆಯೂ ವಿದ್ಯುತ್ ವೇಗವನ್ನು ಪಡೆಯುತ್ತದೆ. ನಂತರ ಏನಾಗುತ್ತದೋ ಒಂದೂ ಗೊತ್ತಾಗುವುದಿಲ್ಲ. ಎಲ್ಲವೂ ಸುಖವಾಗಿ ಕಳೆಯುತ್ತದೆ. ನಂತರ ಮಾಡಿದ್ದು ತಪ್ಪಾಯಿತು ಎನಿಸಿದರೆ! ಹಿಂದೆ ಪರಿಹಾರವಿರಲಿಲ್ಲವೇನೋ. ಈಗಂತೂ Unwanted 72 ಇದೆ. ಎಪ್ಪತ್ತೆರಡು ಗಂಟೆಗಳ ವರೆಗೆ ಮಾಡಿದ ತಪ್ಪನ್ನು (ಒಂದು ವೇಳೆ ಅನಿಸಿದರೆ) ಮುಚ್ಚಿಕೊಳ್ಳುವುದು ಸುಲಭ ಸಾಧ್ಯ.

ಬಿಡಿ. ಈ ಭಾವವೇ ನಮ್ಮ ಸ್ವಚ್ಛಂದ ಲೇಖಕರನ್ನು ಆಕರ್ಷಿಸುತ್ತದೆ. ಮರಳು ಮಾಡುತ್ತದೆ. ಅವರ ಸಾಹಿತ್ಯವನ್ನು ಈ ಭಾವ ರೊಯ್ಯನೆ ತನ್ನೆಡೆಗೆ ಸೆಳೆಯುತ್ತದೆ. ಆಗವನಿಗೆ ಏನೂ ಮಾಡಲು ಸಾಧ್ಯವಾಗುವುದಿಲ್ಲ. ನಂತರ ಭಾವ ತಹಬಂದಿಗೆ ಬಂದಾಗ ಕಾಮವನ್ನೂ ದಾಟಿ ಸಾಹಿತಿ ಮುಂದಕ್ಕೂ ಹೋಗಲು ಸಾಧ್ಯವಾದರೆ ಆ ಸಾಹಿತಿ ಗೆಲ್ಲುತ್ತಾನೆ. ಕಾಮದ ಪ್ರವಾಹ ಅಷ್ಟು ಪ್ರಬಲವಾಗಿರುತ್ತದೆ ಎಂದು ಎನಿಸುತ್ತದೆ.
ಹಾಗೆಲ್ಲ ನೋಡುವಾಗ ನಮ್ಮ ಸಂಸ್ಕೃತದ ಶೃಂಗಾರ ಪ್ರಧಾನ ಸಾಹಿತಿಗಳನ್ನೂ ಒಮ್ಮೆ ನೋಡಬೇಕು. (ಒಟ್ಟಾರೆ ಅಭಿಪ್ರಾಯದಲ್ಲಿ) ಅವರ ಕಾಮ ದೈಹಿಕ ಕ್ರಿಯೆಯ ಮಟ್ಟಕ್ಕೆ ಇಳಿಯುವುದಿಲ್ಲ. ಅದು ಶೃಂಗಾರದ, romanceನ ಹಂತದಲ್ಲಿಯೇ ತೇಲುತ್ತಿರುತ್ತದೆ. ಸೆಲೆಬ್ರೇಷನ್ ಇರುತ್ತದೆ. ಸಂಗ ಸುಖದ ನಂತರ ಪಶ್ಚಾತ್ತಾಪ, ಬೇಜಾರು, ಜಿಗುಪ್ಸೆ ಯಾವುದೂ ಇರುವುದಿಲ್ಲ. ಅವರ ಪ್ರಣಯ ಶುರುವಾಗುವುದು 'ಭಗ (ಯೋನಿ) ಪೂಜೆ'ಯೊಂದಿಗೆ. ಸೃಷ್ಟಿ ವಿಸ್ತಾರಕ್ಕೆ ತನ್ಮೂಲಕ ಅವಕಾಶ ಕೊಡುವ ಯೋನಿಗೆ ಮೊದಲ ಪೂಜೆ. ಈ ಹಿನ್ನೆಲೆಯಲ್ಲಿಯೇ ಶ್ರೀರಂಗ ಮಹಾಗುರು ದಂಪತಿಯ ಅಷ್ಟೋತ್ತರ ಶತನಾಮಾವಳಿಯಲ್ಲಿ ಒಂದು ನಾಮ 'ಭಗಪೂಜಾ ಪರಾಯಣಾಯ ನಮಃ' ಎಂದೇ ಇದೆ. ಅದಕ್ಕೆ ಈ ಅರ್ಥವಂತೆ. ನಂತರ ತತ್ತ್ವ ವಿಸ್ತಾರಕ್ಕಾಗಿ ಮಗುವನ್ನು ಪಡೆಯಲು ಭೋಗ ಪ್ರಕ್ರಿಯೆ. ಎಲ್ಲೂ ಮೈಮರೆವಿಲ್ಲ. ಹಾಗಂತ ಕ್ರಿಯೆ ಯಾಂತ್ರಿಕವಾಗಿಯೂ ನಡೆಯುವುದಿಲ್ಲ. ಭೋಗದ ಕೆಸರಿನಲ್ಲಿ ಭವದ ಕಮಲ ಅರಳಿಸುವ ಕ್ರಿಯೆ. ಹಾಗೆ ಕಾಮವೂ ಪ್ರೇಮ ನದಿಯಲ್ಲಿ ಸಾಗುತ್ತದೆ.
ಸದ್ಯ, ನಮ್ಮ ಕಾಮ ಹಾದಿ ತಪ್ಪಿರುವುದರಿಂದ ಪ್ರೇಮದ ಕೊಟ್ಟಕೊನೆಯ ಪ್ರಪಾತದ ಅಂಚಿನಿಂದ ಕೆಳಗೆ ಬೀಳುತ್ತದೆ. ಹೇಸಿಗೆ, ರೇಜಿಗೆ ಎಲ್ಲವನ್ನೂ ಹುಟ್ಟಿಸುತ್ತದೆ. ಇದರಲ್ಲಿ ಯಾರದ್ದು ತಪ್ಪು? ಕಾಮದ್ದೋ? ನಮ್ಮದೋ?
ಹೀಗೇ ನನ್ನ ಮನಸ್ಸಿಗೇ ವಿಸ್ತರಿಸಿಕೊಳ್ಳುವ ಮನಸ್ಸಾಯಿತು. ಅದನ್ನೇ ಇಲ್ಲಿಯೂ ಬರೆದಿದ್ದೇನೆ. ಇಷ್ಟವಾಗಬಹುದು ಎಂದು ಅಂದುಕೊಂಡಿದ್ದೇನೆ.

- Bharatheesha P.

No comments:

Post a Comment