17 March, 2009
ಅಪ್ಪ = 1 ಮಾವ+5 ಗಂಡಂದಿರು+2 ಊರವರು
ಇಲ್ಲಿ ಹುಟ್ಟುವ ಮಗುವಿಗೆ ಅಪ್ಪ ಯಾರು !?ಏಕೆಂದರೆ ಮೊದಲ ರಾತ್ರಿ ಹೆಣ್ಣು ಸ್ವೀಕರಿಸಿದ ಮಾವನ ಜೊತೆ, ನಂತರದವು ಐವರು ಗಂಡಂದಿರ ಒಟ್ಟಿಗೆ, ಇಡೀ ಮನೆಯ ಮೇಲೆ ಸೇಡು ತೀರಿಸಿಕೊಳ್ಳಲು ಪುಸಲಾಯಿಸಿದವನೊಟ್ಟಿಗೆ, (ಹೆಸರಿಗೆ) ಸೇಡು ತೀರಿಸಿಕೊಳ್ಳಲು ಬಂದವನೊಟ್ಟಿಗೆ ಅವಳು, ಆ ಕಲ್ಕಿ ಇರಬೇಕಾಯಿತು.ಹಾಗಂತ ಅವಳು ಹಾದರದವಳಲ್ಲ. ಪ್ರೇಮಮಯ ಸಂಸಾರ ಮಾಡಲು ಆಸೆಪಟ್ಟ ಒಳ್ಳೆಯ ಹೆಣ್ಣು ಮಗಳೇ ಅವಳಾಗಿದ್ದಳು.ಆದರೆ ಏನು ಮಾಡುವುದು ? ಕಾಲವೇ ಹಾಗಿತ್ತು. ಹೆಣ್ಣು ಮಕ್ಕಳೇ ಇಲ್ಲವೆನ್ನುವಷ್ಟು ಅಭಾವ. ಎದ್ದು, ಬಿದ್ದು ಹುಡುಕಿದಾಗ ಊರ ಜಮೀನ್ದಾರನಿಗೆ ಊರಿನಲ್ಲಿ ಒಂದೇ ಒಂದು ಹೆಣ್ಣಿರುವುದು ಗೊತ್ತಾಗುತ್ತದೆ. ದೊಡ್ಡ ಮಗನಿಗೆ ಅಂತ ಹೆಣ್ಣು ನೋಡಲು ಹೋದಾಗ, ಕಡೆಯ ಮಗನಿಗೆ ಬೇಕಾದ್ರೆ ಕೊಡುತ್ತೇವೆ ಅಂತ ಹೇಳುತ್ತಾರೆ. ಮೊದಲೇ ಮದುವೆಯಿಲ್ಲದೇ ಗಂಡು ಮಕ್ಕಳು ಒದ್ದಾಡುತ್ತಿರುತ್ತಾರೆ. ಮೊದಲನೆಯವನಿಗೆ ಬಿಟ್ಟು ಕಡೆಯವನಿಗೆ ಮಾತ್ರ ಮದುವೆ ಮಾಡಿಸಿದರೆ ಎಲ್ಲರ ಕತೆಯೂ ಮುಗಿದು ಹೋದಂತೆಯೇ ಎಂದು ಹುಡುಗರ ತಂದೆಯ ಎಣಿಕೆ. ಐದು ಲಕ್ಷ +ಗೆ ಅವಳನ್ನು ಐದೂ ಮಕ್ಕಳಿಗೆ ತಂದುಕೊಳ್ಳುವ ಮಾತುಕತೆ, ಮದುವೆ.ಇತ್ತ ಈ ಐವರು ಮಕ್ಕಳ ತಾಯಿ ಸತ್ತು ವರ್ಷಗಳೇ ಕಳೆದುಹೋಗಿರುತ್ತವೆ. ಹಾಗಾಗಿ ಅವರ ಅಪ್ಪನಿಗೂ ಆಸೆ ಇರುವುದು ಸಹಜ. ಐವರೂ ಪಾಳಿಯ ಚರ್ಚೆಯಲ್ಲಿದ್ದಾಗ, ಅವರಪ್ಪ ಐದು ಲಕ್ಷ + ಕೊಟ್ಟದ್ದನ್ನು ಹೇಳಿ ಬ್ಲಾಕ್ಮೇಲ್ ಮಾಡಿ, ಅವನೇ ಮೊದಲ ರಾತ್ರಿಗೆ ಹೋಗುತ್ತಾನೆ.ಕಡೆಯಲ್ಲಿ, ಅವಳು ಬಸುರಾಗಿರುವ ಎಲ್ಲ ಲಕ್ಷಣಗಳೂ ಇದ್ದರೂ, ಜಾತಕ ನೋಡದೇ ಅವಳ ಬಸುರನ್ನು ಒಪ್ಪಿಕೊಳ್ಳುವುದಿಲ್ಲ. ಮಗುವಿಗೆ ತಂದೆ ಯಾರು ? ನಾಲ್ವರೂ (ಒಬ್ಬನನ್ನು ಸಾಯಿಸಿರುತ್ತಾರೆ) ಕಿತ್ತಾಟ ಮಾಡಬೇಕು ಎನ್ನುವಷ್ಟರಲ್ಲಿ ಅವರಪ್ಪ 'ಮೊದಲ ರಾತ್ರಿಯಲ್ಲಿ ನಾನಿದ್ದೆ. ಅದಕ್ಕಾಗಿ ನಾನೇ ಆ ಮಗುವಿನ ಅಪ್ಪ' ಎಂದು ಕಡ್ಡಿ ಮುರಿದಂತೆ ಹೇಳುತ್ತಾನೆ.ಅಷ್ಟರವರೆಗೂ ದನಗಳ ಪಕ್ಕ ಕಟ್ಟಿಹಾಕಿದ್ದ ಅವಳನ್ನು ಮನೆಯೊಳಗೆ ತಂದು ಮಲಗಿಸುತ್ತಾರೆ. ಈ ಸುದ್ದಿ ಊರಿಗೆಲ್ಲ ಹರಡಿ, ಸೇಡು ತೀರಿಸಿಕೊಳ್ಳಲು ಕುಮ್ಮಕ್ಕು ಕೊಟ್ಟವನು, ಸೇಡು ತೀರಿಸಿಕೊಳ್ಳಲು ಹೊರಟವನೇ ಆ ಮಗುವಿನ ಅಪ್ಪನೆಂದು ಕೇರಿಯ ಸಮಸ್ತರ ಮುಂದೆ ಘೋಷಿಸುತ್ತಾನೆ. ಹತ್ತೆಂಟು ಮಂದಿ ಅವಳನ್ನು ತಮ್ಮ ಕೇರಿಗೆ ಕರೆದುಕೊಂಡು ಬರಲು ಜಮೀನ್ದಾರರ ಮನೆಗೆ ಹೊರಡುತ್ತಾರೆ. ನಂತರದ ಮಾರಾಮಾರಿಯಲ್ಲಿ ಅಪ್ಪನಾಗುವ ಸ್ಪರ್ಧೆಯಲ್ಲಿದ್ದವರೆಲ್ಲರೂ ಸಾಯುತ್ತಾರೆ.ಅಷ್ಟಾಗುವಾಗ ಅವಳಿಗೆ ಮಗು ಹುಟ್ಟುತ್ತದೆ. ಅವಳಿದ್ದಲ್ಲಿಗೆ ಓಡೋಡಿ ಬಂದ ಮನೆಯ ಕೆಲಸದಾಳು (15-16 ವರ್ಷದವ) ಹೆಣ್ಣು ಮಗು ಹುಟ್ಟಿದೆಯೆಂದು ಅವಳಿಗೆ ಹೇಳುತ್ತಾನೆ. ಅವಳು ಆ ಮಗುವಿನ ಕಡೆಗೊಮ್ಮೆ ಮಂದಹಾಸದ ದೃಷ್ಟಿ ಬೀರಿ, ನೆಮ್ಮದಿಯ ನಿಟ್ಟುಸಿರು ಬಿಡುತ್ತಾಳೆ.ಹೀಗೆ ಸಾಗುತ್ತದೆ 'ಮಾತೃಭೂಮಿ' ಚಿತ್ರ. 2003ರ ಈ ಚಿತ್ರದ ಸಬ್ ಟೈಟಲ್ - 'A Nation Without Women' ಚಿತ್ರ ಏನಿರಬಹುದು ಎಂಬ ಊಹೆಗೆ ನಮ್ಮನ್ನು ಹಾಗೇ ಹಚ್ಚಿಬಿಡುತ್ತದೆ. ನೋಡುತ್ತಾ ಹೋದಂತೆ ಊಹೆಗೂ ಮೀರಿದ್ದು ತೀಕ್ಷ್ಣವಾಗಿ ನಡೆಯುತ್ತಾ ಹೋಗುತ್ತದೆ. ಒಂದೇ ಒಂದು ಸ್ಯಾಂಪಲ್ : ಅವಳು ಈ ಅಸಹ್ಯ ಪ್ರಪಂಚದಿಂದ ಓಡಿಹೋಗಲು ಪ್ರಯತ್ನಿಸುತ್ತಾಳೆ. ಅದೇ ಅವಳು ಮಾಡಿದ ಬಹುದೊಡ್ಡ ತಪ್ಪು. ಮನೆಗೂ ಸೇರಿಸುವುದಿಲ್ಲ. ಕೊಟ್ಟಿಗೆಯಲ್ಲಿ ದನಗಳ ಪಕ್ಕ ಕಟ್ಟಿ ಹಾಕುತ್ತಾರೆ. ಹಾಗಂತ ಕೆಲಸ ಮಾತ್ರ ನಿಲ್ಲಿಸುವುದಿಲ್ಲ. ಅವಳಲ್ಲಿ ಊಟ, ತಿಂಡಿ, ನಿದ್ರೆ, ಗಾಳಿ, ಬೆಳಕು ಯಾವುದೂ ಇಲ್ಲದೇ ತಿಂಗಳುಗಟ್ಟಲೆ ಕೊಟ್ಟಿಗೆಯಲ್ಲಿ ಮರದ ಕೊರಡಿನಂತೆ ಬಿದ್ದುಕೊಂಡಿದ್ದಾಗಲೂ, ಅವಳ ಪತಿ ಸಮಾನರೆಲ್ಲರೂ ಅಲ್ಲಿಗೆ ಬಂದು, ತಮ್ಮ ಪಾಡಿಗೆ ತಮ್ಮ ಕೆಲಸವನ್ನು ಮುಗಿಸಿಕೊಂಡು ಹೋಗುತ್ತಿರುತ್ತಾರೆ. ಅವಳಿಗೆ ಬಂದವರು ಯಾರು ಎಂದು ಗೊತ್ತಾಗುವಷ್ಟರಲ್ಲಿ ಅಲ್ಲಿ ಯಾರೂ ಇರುವುದಿಲ್ಲ. ಹೀಗೇ ನಡೆಯುತ್ತಿದ್ದಾಗ ಅವಳು ಬಸುರಿಯಾಗುತ್ತಾಳೆ. ವಾಂತಿ ಮಾಡಿಕೊಳ್ಳಲೂ ತಾಕತ್ತು ಇರುವುದಿಲ್ಲ. ಅಳು ಗಂಟಲಲ್ಲೇ ಸಿಕ್ಕಿಕೊಂಡಿತು ಎಂದು ಹೇಳುತ್ತೇವಲ್ಲಾ ಹಾಗೇ ಅವಳು ಒದ್ದಾಡುತ್ತಾಳೆ. ಮನೀಶ್ ಝಾ ಚಿತ್ರವನ್ನು ಚೆನ್ನಾಗಿ ನಿರ್ಮಿಸಿದ್ದಾರೆ. ಅಶ್ಲೀಲಕ್ಕೂ ಶೀಲ ತುಂಬಿದ್ದಾರೆ. ಅವಳು, ಆ ಕಲ್ಕಿಯನ್ನು ತುಲಿಪ್ ಜೋಶಿ ಗಟ್ಟಿಯಾಗಿ ಒಪ್ಪಿಸಿದ್ದಾಳೆ. ಅದು ಮಾತೇ ಹೊರಡ ಭಾರವಾದ ಪಾತ್ರ. ಆದರೂ ಮಾತೂ ಹೇಳಲಾಗದ್ದನ್ನು ಮೌನದಲ್ಲಿ ಹೇಳಿಸಿದ್ದು ಆಕರ್ಷಕವಾಗಿದೆ.ಹಾಗಾಗಿ ಇದಕ್ಕೆ ನಾಲ್ಕು ಅಂತಾರಾಷ್ಟ್ರೀಯ ಪ್ರಶಸ್ತಿಗಳೂ ಬಂದಿವೆ.ಸಾಧ್ಯವಾದರೆ ಒಮ್ಮೆ ನೋಡಿ. ಅನ್ನಿಸಿದ್ದನ್ನು ಗಟ್ಟಿಯಾಗಿ ಹೇಳಿ.
Subscribe to:
Post Comments (Atom)

No comments:
Post a Comment